Tuesday, March 17, 2015

                            ಅವ್ವ
                       

ಇಂದು ಯಾಕೋ ತುಂಬಾ ನೆನಪಾಗ್ತಿದ್ದಾರೆ ನನ್ನ 'ಅವ್ವ' ( ನನ್ನ ಅಜ್ಜಿ ).
ನನ್ನ ಮಾವ 9 ತಿಂಗಳ ನನ್ನನ್ನು ಎತ್ತಿಕೊಂಡು ಅಮ್ಮನಿಗೆ ' ನಮ್ಮನೇಲಿ ಸ್ವಲ್ಪ ದಿನ ಇರಲಿ ' ಎನ್ನುತ್ತಾ ಕರೆದೊಯ್ದು ಸಾಕಿದರು .  ಇನ್ನೂ ಮದುವೆಯಾಗಿರದ ಚಿಕ್ಕಿ , ಅಜ್ಜಿ, ಮಾವಂದಿರು , ಅತ್ತೆಯರು , ಅವರ ಮಕ್ಕಳು ಎಲ್ಲರ ಕಣ್ಮಣಿಯಾಗಿ ಬೆಳೆದ ನನಗೆ ನನ್ನ 'ಅವ್ವ' ಅತ್ಯಂತ ಪ್ರೀತಿಯ ವ್ಯಕ್ತಿಯಾಗಿದ್ದರು .

ಮಾರುದ್ದದ ಕೂದಲಿಗೆ ಮಿಳ್ಳೆ  ಬೆಚ್ಚನೆಯ ಎಣ್ಣೆಯನ್ನು ಹಚ್ಚಿ , ಗಿರಿಗಿರಿದು 4 ಕಾಲಿನ ಜಡೆ ಹಾಕಿ , ಮುಂಗುರುಳ ತೀಡಿ , ಹೂವು ಮುಡಿಸುತ್ತಿದ್ದ ಅವ್ವ , ಸೀಗೆಕಾಯಿ , ಅಂಟುವಾಳದ ಕಾಯಿ ಬೇಯಿಸಿದ ನೀರಿನಲ್ಲಿ ತಲೆ ತೊಳೆದು , ಹಂಡೆ ನೀರನ್ನು ಮೊಗೆಮೊಗೆದು ಎರೆದು , ಮಲೆನಾಡ ಗಾಳಿಯಿಂದಾಗಿ ಶೀತವಾಗಬಾರದೆಂದು ಸಾಂಬ್ರಾಣಿ ಹೊಗೆ ಹಾಕಿ ಕೂದಲೊಣಗಿಸಿ ,  ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿನ್ನಿಸುತ್ತಿದ್ದ ಅವ್ವ,
'ಅಡುಗೆ ಹೇಳಿಕೊಟ್ಟು ಬರುವಂಥದ್ದಲ್ಲ ,  ನೀನೆ ಸ್ವಂತ ಪ್ರಯತ್ನದಿಂದ ಕಲಿಯಬೇಕು ' ಎನ್ನುತ್ತಿದ್ದ ಅವ್ವ ,  ಹಾಡು ಹಸೆ ಕಲಿಯದ ಹೆಣ್ಣುಮಕ್ಕಳು ನಿರ್ಗಂಧ ಕುಸುಮದಂತೆ ಎನ್ನುತ್ತಿದ್ದ ಅವ್ವ,  ನಂತರ , ಬೆಂಗಳೂರಿಗೆ ಬಂದು ವಿದ್ಯಾರ್ಥಿ ಜೀವನ ಮುಗಿಸಿ ,  ಕೆಲಸಕ್ಕೆ ಸೇರಿದರೂ , ಬೇಸಿಗೆ ರಜೆಗೆ , ದಸರಾ ರಜೆಗೆ ಬರಲೇಬೇಕೆಂದು ತಾಕೀತು ಮಾಡುತ್ತಿದ್ದ ಅವ್ವ, ಹಾಸಿಗೆಯ ಮೇಲೆ ಅವರದೇ ನೂಲಿನ ಸೀರೆಯಿಂದ ತಾವೇ ಹೊಲಿಯುತ್ತಿದ್ದ ಕೌದಿ ಹಾಸಿ ,  ಬೆಚ್ಚನೆಯ ಪ್ರೀತಿಯ ಅನುಭವ ಕೊಟ್ಟ ಅವ್ವ, ರಾತ್ರಿ ನಿದ್ದೆಯಲ್ಲಿ ಅಕಸ್ಮಾತ್ ಸೀನಿದರೆ , ನನಗರಿವಿಲ್ಲದೆ ಹಸಿ ಈರುಳ್ಳಿಯನ್ನು ನನ್ನ ಅಂಗಾಲಿಗೆ ತಿಕ್ಕುತ್ತಿದ್ದ ಅವ್ವ , ಯಾವುದೋ ಹೊಸ ರುಚಿ ಪ್ರಯೋಗ ಮಾಡಲೆಂದು ಸರಿ ರಾತ್ರಿಯಲ್ಲಿ ಎಬ್ಬಿಸಿ ಕೂರಿಸಿಕೊಳ್ಳುತ್ತಿದ್ದ ಅವ್ವ , ಅಪ್ಪ - ಅಮ್ಮ ನನಗೆ ಗದರಲೂ ಬಿಡದೆ , ನನ್ನ ಕೆಂಪು ಕೋಟೆಯಾಗಿದ್ದ ನನ್ನವ್ವ ,

ಇಳಿ ವಯಸ್ಸಿನಲ್ಲಿ ಒಬ್ಬಂಟಿಯಾದರೂ ,  ತನ್ನ ನೇಮ , ನಿಷ್ಠೆಗಳನ್ನು ಬಿಡದೆ ,  ಶನಿವಾರದಂದು ಆ ಶ್ರೀನಿವಾಸನನ್ನೂ , ಸೋಮವಾರದಂದು ಧರ್ಮಸ್ಥಳದ ಮಂಜುನಾಥನನ್ನೂ , ಬೇಲೂರಿನ ಚೆನ್ನಕೇಶವನನ್ನು ಧರೆಗಿಳಿವಂತೆ ಪೂಜಿಸುತ್ತಿದ್ದ ನನ್ನವ್ವ , 'ನಿನ್ನ ಮದುವೆಯನ್ನು ನೋಡದೆ ನಾನು ಹೋಗುವವಳಲ್ಲ ' ಎನ್ನುತ್ತಿದ್ದ ನನ್ನವ್ವ , ನನ್ನ ಮೊದಲ ಸಂಬಳದಲ್ಲಿ ಸೀರೆ ತಂದು ಕೊಟ್ಟಾಗ ಅಪ್ಪಿ ಮುದ್ದಾಡಿದ್ದ ನನ್ನವ್ವ , ಕಡೆಗೂ ನನ್ನ ಹುಟ್ಟುಹಬ್ಬದಂದೇ ನಮ್ಮನ್ನಗಲಿ ಮರೆಯದ ನೆನಪಾಗಿ ಉಳಿದುಬಿಟ್ಟಿದ್ದಾರೆ .

ಎಷ್ಟೋ ವರ್ಷಗಳು ಹುಟ್ಟುಹಬ್ಬವನ್ನು ಯಾರಿಗೂ ಹೇಳದೇ ಸುಮ್ಮನಿದ್ದ ನಾನು , ಅಣ್ಣ ಹೇಳಿದಂತೆ ' ಅವ್ವ ಇದ್ದಿದ್ದರೆ ' ಸದಾ ಖುಷಿಯಿಂದಿರು ' ಎಂದು ಹಾರೈಸುತ್ತಿದ್ದರೆಂದುಕೊಂಡು ನಗುವುದನ್ನು ಅಭ್ಯಸಿಸಿಕೊಂಡರೂ , ಅಂದು ಎಂದಿಗಿಂತಲೂ ಅವರನ್ನು ನೆನೆಯುತ್ತೇನೆ . ಬಹುಶಃ ನನಗೆ ಅತ್ಯಂತ ಪ್ರೀತಿಪಾತ್ರರಾದವರು ವಿವಿಧ ಕಾರಣಗಳಿಗೆ ನನ್ನಿಂದ ದೂರವಾಗುತ್ತಾರೋ ಏನೋ . ಕೆಲವು ಸಲ ಯಾರನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಕಮಲದೆಲೆಯ ಮೇಲಿನ ನೀರಿನ ಹನಿಯಂತೆ ಇದ್ದುಬಿಡಬೇಕೆನಿಸುತ್ತದೆ .

- ತಾರಾ ಶೈಲೇಂದ್ರ

No comments:

Post a Comment