Wednesday, September 3, 2014

ಕುಮಟಾದಲ್ಲಿ ೧೨ ಗಂಟೆಗಳು

                                                             

ಹೆಚ್ಚೂ ಕಡಿಮೆ  ೨ ತಿಂಗಳುಗಳಿಂದ  ಪ್ರತಿ ಬಾರಿ ಫೋನ್ ಮಾಡಿದಾಗ , ಪ್ರಿಯಾ ನೆನಪು ಮಾಡುತ್ತಿದ್ದ ವಿಷಯ ಸ್ವಸ್ತಿ ಬಳಗದ ಸಮ್ಮಿಲನ ಹಾಗೂ 'ಮಳೆ ಮಾರುವ ಹುಡುಗ' ಪುಸ್ತಕದ ಲೋಕಾರ್ಪಣೆ . ಖಂಡಿತ ಸಮಯ ಮಾಡಿಕೊಂಡು ಬರಬೇಕು ಎನ್ನುವ ಅವರ ಪ್ರೀತಿಯ ಒತ್ತಾಯಕ್ಕೆ 'ನೋಡುವ, ಮೊದಲು ದಿನಾಂಕ ನಿಗದಿಪಡಿಸಿ ತಿಳಿಸಿ' ಎನ್ನುತ್ತಿದ್ದೆನಾದರೂ ನಾನು ಹೋಗಲಾಗುವುದು ಎಂಬ ವಿಶ್ವಾಸ ನನಗೇ ಇರಲಿಲ್ಲ .

ಕಳೆದ ಬಾರಿ ಪ್ರಿಯಾ ಫೋನ್ ಮಾಡಿದಾಗ , ಮನೆಯವರನ್ನು ಕೇಳಿದೆ - 'ಒಂದೆರಡು ದಿನ ಸಾಗರ , ಸಿಗಂದೂರು ಚೌಡೇಶ್ವರಿ ದೇವಸ್ಥಾನ, ಕುಮುಟಾ ಸುತ್ತಿ ಬರೋಣ , ಈ ಸಮಾರಂಭಕ್ಕೆ ಹೋಗುವ ಆಸೆ " ಅಂತ . ಅವರೂ ಒಪ್ಪಿದರು. ಆದರೆ ನಂತರ ಕಾರಣಾಂತರಗಳಿಂದ   ಮನೆಯವರು ಯಾರೂ ಬರಲಾಗದು ಎಂದಾಗ ನಿರಾಸೆಯಾಯಿತು.  ಕಡೆಗೆ ಯಜಮಾನರು "ನೀನೊಬ್ಬಳೆ ಹೋಗಿ ಬಾ " ಎಂದರು .  ನಂತರ ನೋಡಿದರೆ , ಟಿಕೆಟ್ ಸಿಗುತ್ತಿಲ್ಲ . ವಿನಾಯಕ್ ಭಟ್ ಅಲಿಯಾಸ್ ಖುಷಿ ವಿನು ಫೋನ್ ಮಾಡಿ "ಅಕ್ಕಾ ಬರ್ತಿದ್ದೀ ತಾನೇ?" ಎನ್ನುವಾಗ ಟಿಕೆಟ್ ಸಿಗುತ್ತಿಲ್ಲವೆಂದೆ . ಪಾಪ , ನಂತರ ಅವನೇ ಸುತ್ತಿ , ನನಗೆ ಟಿಕೆಟ್ ಕಾದಿರಿಸಿದ.  ಪ್ರಿಯಾಗೆ ಬರಲಾಗದೆಂದು ಹೇಳಿ ಆಗಿತ್ತು. ಹಾಗಾಗಿ ವಿನಾಯಕ್ ಭಟ್ ಗೆ ಹೇಳಿದೆ 'ಪ್ರಿಯಕ್ಕಂಗೆ ಹೇಳೋದು ಬೇಡ , ಇದು ಸರ್ಪ್ರೈಸ್ ಆಗಿರಲಿ ' ಎಂದು . ಆದರೆ ಅವನು ಕಳ್ಳ , ಗುಟ್ಟು ಬಿಟ್ಟು ಕೊಟ್ಟಿರಬೇಕು . ಪುನಃ ಪ್ರಿಯಾ ಅವರ ಫೋನ್ " ಏನು ನಿರ್ಧಾರ ಮಾಡಿದ್ರಿ ?   ಬಂದಿದ್ದರೆ ಚೆನ್ನಿತ್ತು " ಎಂದು . ಕಡೆಗೆ 'ಬರುವ ಯೋಚನೆ ಇದೆ , ನೋಡುವ ' ಎಂದೆ . 

 ಮನೆಯಲ್ಲಿ ಸ್ವಲ್ಪ ಆತಂಕ ಇತ್ತು . ಒಬ್ಬಳನ್ನೇ ಅಷ್ಟು ದೂರ , ಅದೂ ರಾತ್ರಿ ಬಸ್ ನಲ್ಲಿ ಹೇಗೆ ಕಳಿಸೋದು ? ಆ ಕಡೆ ನಕ್ಸಲೈಟ್ ರ ಕಾಟ ಏನಾದರೂ ಇದೆಯಾ  ? ಪ್ರಿಯಾ ಅವರೊಬ್ಬರೇ ಪರಿಚಯ . ಅವರಿಗೆ ನನ್ನನ್ನು ಬೆಳಿಗ್ಗೆ ಪಿಕ್ ಮಾಡಲಿಕ್ಕೆ ಸಮಯ ಸಿಗುತ್ತಾ ಇತ್ಯಾದಿ ಇತ್ಯಾದಿ . ಕಡೆಗೆ ವಿನಾಯಕ್ ಭಟ್ ನನ್ನನ್ನು ಬೆಳಿಗ್ಗೆ ಮೊದಲು ಅವರ ಮನೆಗೆ ಕರೆದುಕೊಂಡು ಹೋಗಿ, ನಂತರ ಕಾರ್ಯಕ್ರಮಕ್ಕೆ ಕರೆತರುವುದು ಎಂದಾಯ್ತು .  ಹೊರಡುವ ಹಿಂದಿನ ದಿನದಿಂದಲೇ ಪ್ರಿಯಾ ಹಾಗೂ ವಿನಾಯಕ್ ಫೋನ್ 'ಎಲ್ಲಾ ಸಿದ್ಧ ತಾನೇ ? ಎನೂ ಯೋಚನೆ ಮಾಡುವಷ್ಟಿಲ್ಲ . ನಾವು ನಿಮ್ಮ ಬಸ್ ನಿಲ್ದಾಣ ತಲುಪುವ ಮೊದಲೇ ಅಲ್ಲಿ ಹಾಜರು' ಎಂದು . ಪುನಃ ಬಸ್ ಹತ್ತಿದ ಮೇಲೆ ಫೋನ್ , ಮಧ್ಯೆ ಫೋನ್ ನಾನು ಎಲ್ಲಿರುವೆ ಎಂದು ತಿಳಿದುಕೊಳ್ಳಲು . ಬಸ್ ನಲ್ಲಿ ಅಚಾನಕ್ ಆಗಿ ಸಾಯೀಶ್ ಭಂಡಾರಿಯ ಭೇಟಿ . ಖುಷಿ ಆಯ್ತು . ಅವರು ಸಾಗರದಲ್ಲಿ ಇಳಿದರೂ ಸಹ , 'ಅಕ್ಕಾ ಫೋನ್ ಮಾಡಿ ಅವರು ಬಂದಿದ್ದಾರಾ ತಿಳಿದುಕೊಳ್ಳಿ ' ಎಂದು ಕಾಳಜಿ ತೋರಿದರು .  ಅಂತೂ ಇಂತೂ ಬೆಳಿಗ್ಗೆ ೭.೩೦ ಕ್ಕೆ ಬಸ್ ಇಳಿದಾಗ ವಿನಾಯಕ್ ಭಟ್ ರೈನ್ ಕೋಟ್ ಹಿಡಿದು ನಿಂತಿದ್ದ "ಏನೇ ಅಕ್ಕಾ ? ಇಷ್ಟು ಹೊತ್ತಾ ಬರೂದು " ಎನ್ನುತ್ತಾ .

ಅಲ್ಲಿಂದ ಅವನ ಊರಾದ  ಬ್ರಹ್ಮೂರಿಗೆ ಹೋಗಿ, ಅವನ ಆಯಿ, ದೊಡ್ಡ ಆಯಿ ಎಲ್ಲರ ಪ್ರೀತಿಯಲ್ಲಿ ಮಿಂದು , ಅವನೇ ಮಾಡಿಕೊಟ್ಟ ಚಪಾತಿ ತಿಂದು , ಕಾರ್ಯಕ್ರಮಕ್ಕೆ ಬಂದೆವು . ಶ್ರೀ ಕರಣಂ ಪವನ್ ಪ್ರಸಾದ್ , 'ಮಳೆ ಮಾರುವ ಹುಡುಗ' ಕಥಾಸಂಕಲನದ  ಕರ್ತೃ ಶ್ರೀ ಕರ್ಕಿ ಕೃಷ್ಣ ಮೂರ್ತಿ , ಶ್ರೀ ವಸಂತಕುಮಾರ್ ಪೆರ್ಲ , ಮತ್ತು ಶ್ರೀ ಶ್ರೀಧರ ಬಳಗಾರರ ಮಾತುಗಳನ್ನು ಕೇಳುವ ಸೌಭಾಗ್ಯ ಒದಗಿತು . ಕಾರ್ಯಕ್ರಮದ ನಂತರ ಊಟ , ನಂತರ ಸ್ವಸ್ತಿ ಬಳಗದ ಸದಸ್ಯರ ಕಿರು ಪರಿಚಯ , ಭೈರಪ್ಪನವರ ಕೃತಿಗಳಲ್ಲಿ  ಮಾನವೀಯ ಸಂಬಂಧಗಳು ಹಾಗೂ ಸಂವೇದನೆಗಳು ಎಂಬ ವಿಷಯದ ಬಗ್ಗೆ ಚರ್ಚೆ ಸೊಗಸಾಗಿತ್ತು . ಕಾರ್ಯಕ್ರಮದ ದೆಸೆಯಿಂದ ಗಾಯತ್ರಿ ಸಚಿನ್ ಹಾಗೂ ಸುಧಾ ಅವರ ಮುಖತಃ ಭೇಟಿ ಕೂಡ ಖುಷಿ ಕೊಟ್ಟಿತು .  ಅಲ್ಲಿಂದ ಪ್ರಿಯಾ ಭಟ್ ಮನೆಗೆ ಹೋದೆವು . ಅಲ್ಲೂ ಸಹ ನಗು, ಹರಟೆ , ರುಚಿಯಾದ ಊಟ ಎಲ್ಲ ಮುಗಿದು, ರಾತ್ರಿ ೭.೩೦ಕ್ಕೆ ನಮ್ಮನ್ನು ಬೀಳ್ಕೊಡಲು ಬಂದರು ಪ್ರಿಯಾ ಭಟ್ , ಮಹಾಬಲೇಶ್ವರ ಭಟ್  ಹಾಗೂ ವಿನಾಯಕ್ ಭಟ್ ಅಲಿಯಾಸ್ ಖುಷಿ ವಿನು .

ಬಸ್ ಹತ್ತುವವರೆಗೂ 'ಅಕ್ಕಾ ಹೋಗಲೆಬೇಕಾ' ಎನ್ನುತ್ತಿದ್ದ ವಿನಾಯಕ್ ಭಟ್ ಹನಿಗಣ್ಣಾಗಿದ್ದು ಕಂಡು ನಾನೂ ಸಹ ಭಾವುಕಳಾಗಿದ್ದು ನಿಜ . ನೂರೆಂಟು ನೆನಪು, ಹತ್ತಾರು ಜನರ ಪ್ರೀತಿ , ಸ್ನೇಹ ಹೊತ್ತು ಬೆಂಗಳೂರಿನ ಕಡೆಗೆ ಹೊರಟಾಗ , ಈ ಎಲ್ಲಾ ಜನರ ಒಂದೇ ಪ್ರಶ್ನೆ 'ಪುನಃ ಬರುವುದು ಯಾವಾಗ ?' ನನ್ನ ಮನದಲ್ಲೂ ಈಗ ಅದೇ ಪ್ರಶ್ನೆ - 'ಇವರೆಲ್ಲರನ್ನೂ ಪುನಃ ನೋಡುವುದು ಯಾವಾಗ ?'

- ತಾರಾ ಶೈಲೇಂದ್ರ




 

Saturday, August 2, 2014

ಬಾಳ ಗೆಳೆಯ ( ಸ್ನೇಹಿತರ ದಿನಾಚರಣೆಯಂದು ನನ್ನ ಬಾಳ ಗೆಳೆಯನಿಗೆ )

               ಬಾಳ ಗೆಳೆಯ
                                        
ಹಾಕಿದೆ ನಾನಂದು ವರಮಾಲೆ
ಇಂದೆನಗೆ ಸಂತಸದ ಸರಮಾಲೆ .
ನನ್ನೊಡನಿರುವೆ ನೀ ಎಡವಿದಾಗ ,
ಕಾಲಿಗೆ ಕಷ್ಟಗಳು ತೊಡರಿದಾಗ .
ನಾ ನಕ್ಕಾಗ ನಗುವೆ ,
ಅತ್ತಾಗ ನೀನೂ ಹನಿಗಣ್ಣಾಗುವೆ.
ಸಹಿಸುವೆ  ನನ್ನೆದೆಯ ಆವೇಶ,
ಕೆಲವೊಮ್ಮೆ ಅಕಾರಣ ಆಕ್ರೋಶ .
ಕಾರಣವೇ ಮರೆತ ಜಗಳ
ತೋಯಿಸಿದಾಗ ನನ್ನ ಕದಪುಗಳ,
ಕಲಿತ ಬುದ್ಧಿಯನೆಲ್ಲ ವ್ಯಯಿಸಿ ,
ಪುನಃ ಕಾಡುವುದಿಲ್ಲವೆಂದು ರಮಿಸಿ ,
ಅನುನಯದ ಮಾತ ಪೋಣಿಸಿ ,
ಲೆಕ್ಕವಿಲ್ಲದಷ್ಟು ಬಾರಿ ನಗಿಸುವೆ .
ನೋವಿನಲಿ ಹಾಗೂ ನಲಿವಿನಲಿ
ನೀನಿರಲು ಸದಾ ಜೊತೆಯಲಿ
ಮನಗಳು ಬೆರೆತಿವೆ ಮಾಗಿ
ಬಾಳಪಯಣದಿ ಜೊತೆಯಾಗಿ ಸಾಗಿ

- ತಾರಾ ಶೈಲೇಂದ್ರ


                      
                                                              
 

Tuesday, July 22, 2014

ಬಾಲಕಾರ್ಮಿಕ (poem)

 
ಬಾಲಕಾರ್ಮಿಕ 
 
ಮೇಜು ಒರೆಸುವ 
ಪಾತ್ರೆ ತೊಳೆಯುವ 
ಕಸ ಗುಡಿಸುವ 
ಪುಟ್ಟ ಬಾಲಕಿಗೆ 
ತುಂಬಿದ ಹೊಟ್ಟೆ 
ಕನ್ನಡಿಯೊಳಗಿನ ಗಂಟು 
 
    ರದ್ದಿ ಹುಡುಕಲು 
    ಚಿಂದಿ ಆಯಲು 
    ಸಂದಿ-ಗೊಂದಿ 
    ಸುತ್ತುವ ಚಿಣ್ಣಗೆ 
    ಬಾಲ್ಯದ ಸೊಗಸು 
    ಹಗಲು ಕನಸು 
 
ಬೀಡಿ ಕಟ್ಟುವ 
ಊದುಬತ್ತಿ ಹೊಸೆಯುವ 
ಜೀತ ಮಾಡುವ 
ಮುದ್ದು ಮಕ್ಕಳಿಗೆ 
ಸುಖ-ಸಂತೋಷ 
ಗಗನ ಕುಸುಮ 
 
    ತನ್ನನ್ನು ಉದ್ಧರಿಸುವ 
    ಭಾಷಣ ಮಾಡುವ 
    ಸರ್ಕಾರ-ಸಂಸ್ಥೆಗಳ 
    ಆಶ್ವಾಸನೆ ಬಾಲಕಾರ್ಮಿಕನಿಗೆ 
    ನೀರ ಮೇಲಣ ಗುಳ್ಳೆ 
 
-  ತಾರಾ ಶೈಲೇಂದ್ರ 

Monday, July 21, 2014

ಒಡವೆ

               ಒಡವೆ

ಮುತ್ತೈದೆಗೆ ಒಡವೆ
ಕುಂಕುಮ, ಮೂಗುತಿ ,
ಮಾಂಗಲ್ಯ, ಬಳೆ
ಕಾಲುಂಗುರ, ಸಿಂಧೂರ .
ನಮಗೋ ಹುಚ್ಚು
ಕಂಡರೆ ಮುತ್ತು ,
ಹವಳ , ವಜ್ರ ,
ವೈಢೂರ್ಯ , ಬಂಗಾರ .
ಅನಿಸಬಹುದು ಇದು
ಬರೀ ಆಡಂಬರ , ಬಡಿವಾರ
ಆದರೆ, ಒಮ್ಮೆ ಯೋಚಿಸಿ
ಅಕ್ಕಸಾಲಿಗನಿಗೆ ಆಗಬೇಡವೆ ವ್ಯಾಪಾರ ?

- ತಾರಾ ಶೈಲೇಂದ್ರ

 

Tuesday, July 15, 2014

ನನ್ನ ಜನಕನಿಗೊಂದು ನಮನ (poem)

ಏನ ನೀಡಬಲ್ಲೆ ನಿನಗೆ ಜನಕ ?
ಕಣ್ರೆಪ್ಪೆಯಲಿಟ್ಟು ಕಾದಿರುವೆ ನನ್ನ ಈತನಕ
ಮಗುವಾಗಿದ್ದಾಗ ಹೆಗಲ ಮೇಲೆ ಹೊತ್ತು
ಪಿತೃ ಪ್ರೇಮದ ಸಂತಸದ ಸಿರಿಯನಿತ್ತು
ಬೆಳೆದಂತೆ ನನಗಾದೆ ಮಾರ್ಗದರ್ಶಕ , ದಾರ್ಶನಿಕ
ಪ್ರಪಂಚದಲೆನಗೆ ನೀ ಸತ್ಯನಿಷ್ಠೆಯ ದ್ಯೋತಕ
ನೋವಲ್ಲಿದ್ದರೂ ನಗುವ ನಿನ್ನ ಸಹನೆ-ತಾಳ್ಮೆ
ಎಲ್ಲದರಲ್ಲೂ ಅನುಕರಣೀಯ ನಿನ್ನ ಜಾಣ್ಮೆ
ಕುಟುಂಬಕ್ಕೆ ಮಾದರಿ ನಿನ್ನ ವಾತ್ಸಲ್ಯ
ಏನೇ ಆದರೂ ಕ್ಷೀಣಿಸದ ವಾಂಛಲ್ಯ
ನೀ ನನ್ನ ಜನ್ಮದಾತೆಯ ಸಹಚಾರಿ
ಅದಕೆ ಸದಾ ನಾನಿನಗೆ ಆಭಾರಿ
ಕಲಿಸಿದೆ ನನಗೆ ನ್ಯಾಯ ನೀತಿ
ಪ್ರಪಂಚದ ಎಲ್ಲಾ ರಿವಾಜು, ರೀತಿ
ಇಂದು ನೀನಾಗಿರುವೆ ಮಗುವಿನ ರೀತಿ
ನಾನೇನ ನೀಡಬಲ್ಲೆ ? ಬರೀ ಹಿಡಿಯಷ್ಟು 'ಪ್ರೀತಿ'

- ತಾರಾ ಶೈಲೇಂದ್ರ

 

ಕೃಷ್ಣಸಖಿ (poem)

                   ಕೃಷ್ಣಸಖಿ


ಮೃದುಭಾಷಿ ಸುಂದರಿ ರಾಜಕುವರಿ  ತಾ
ವರಿಸಿದಳು ಮಹಾರಾಜ ರಾಣಾ ಕುಂಭನಾ
ತೊರೆದಳು ಐಹಿಕ ಸುಖ-ಭೋಗವ
ಸೇರಿದಳು ಭಾಗವತರೊಂದಿಗೆ ದೇವಮಂದಿರವ

ಮತ್ಸರ ತಳೆದವರು ಕಳುಹಿದರು ಹಾವ
ಅದಾಯಿತು  ಪುತ್ಥಳಿಯ ಕೊರಳಿನ ಹಾರ
ಹಾಲಾಹಲವದು ಸಿಹಿ-ಸವಿಯ ಜೇನಾಯ್ತು
ಆಣಿಯ ಹಾಸು ಅರಳಿದ ಕುಸುಮದಂತಾಯ್ತು

ಬೃಂದಾವನದಿ ಹರಿಯಿತು ಅವಳ ಕೃಷ್ಣಪ್ರೇಮ
ಭವಬಂಧನ ಮರೆತು ಮನವಾಯ್ತು ನಿಷ್ಕಾಮ
ಬಂದರಾ ಅಕ್ಬರ್ ತಾನ್ಸೇನರು  ಜೊತೆಗೂಡಿ
ಸಾಧ್ವಿ ತಾನಾಗಿದ್ದಳು ಕೃಷ್ಣನ ಒಡನಾಡಿ

ಪತಿ ಬಂದನು ಜೊತೆಗಿರಲಾರೆವೇ ನಾವೆಂದು
ನುಡಿದಳಾಕೆ ಪತ್ನಿ ನಾನು ಶ್ರೀಕೃಷ್ಣನಿಗೆಂದು
ದುಃಖಿಸಿದನು  ರಾಣಾ ಸಹಿಸಲಾರದ ನೋವೆಂದು
ಅರಿತನಾಕೆ ಶ್ರೀಕೃಷ್ಣನಿಗರ್ಪಿತವಾದ ನಿರ್ಮಾಲ್ಯದ ಹೂವೆಂದು

- ತಾರಾ ಶೈಲೇಂದ್ರ


 

Wednesday, July 2, 2014

ಪದೇ ಪದೇ ನೆನಪಾದೆ ( poem)

 
 
ಪದೇ  ಪದೇ  ನೆನಪಾದೆ
 
 

ಹೀಗೆಯೇ ಮತ್ತೊಂದು ವರ್ಷ ಸಂದಿದೆ
ನಿನ್ನ ನೆನಪು ಮರುಕಳಿಸಿ ಬಂದಿದೆ
ಹೇಗೆ ಕಳೆದೆವೊ ನೀನಿರದ ಹಗಲುಗಳ ,
ನಿದ್ದೆ ಬಾರದ ನೀರಸ ಇರುಳುಗಳ
ಅಚ್ಚಳಿಯದೆ  ನಿಂತಿರುವೆ ಸಹೃದಯರ ಮನದಲ್ಲಿ
ನಿಚ್ಚಳ ಪ್ರೀತ್ಯಾದರಗಳ ಸುಂದರ ಹೂಬನದಲ್ಲಿ .
ಘಟಿಸದಿದ್ದರೆ ಚೆನ್ನಿತ್ತು ಈ ದುಃಸ್ವಪ್ನ
ಆಗಿ ಹೋದವು ಕನಸುಗಳೆಲ್ಲ ಭಗ್ನ
ಗಳಿಸಲಾರೆವು ನಾವು ನಿನ್ನಂತೆ ಜನಾನುರಾಗ
ಮುಗಿಯದು ಎಂದಿಗೂ ಸಂತಾಪ, ವಿಯೋಗ
ಬದುಕುತಿರುವೆವು ಇಲ್ಲದೆ ನಮಗೆ ಗತ್ಯಂತರ
ತಿಳಿದಿದೆ ನಮಗೆ ಶೋಕವಿದು ನಿರಂತರ
ಕಳೆಯಿತು ಕಷ್ಟದಿಂದ ವರ್ಷಗಳು ಇಪ್ಪತ್ತೆರಡು
ಕೊನರದು ಬತ್ತಿದಾ ಭಾವಗಳ ಕೊರಡು .

---  ತಾರಾ ಶೈಲೇಂದ್ರ