Wednesday, September 3, 2014

ಕುಮಟಾದಲ್ಲಿ ೧೨ ಗಂಟೆಗಳು

                                                             

ಹೆಚ್ಚೂ ಕಡಿಮೆ  ೨ ತಿಂಗಳುಗಳಿಂದ  ಪ್ರತಿ ಬಾರಿ ಫೋನ್ ಮಾಡಿದಾಗ , ಪ್ರಿಯಾ ನೆನಪು ಮಾಡುತ್ತಿದ್ದ ವಿಷಯ ಸ್ವಸ್ತಿ ಬಳಗದ ಸಮ್ಮಿಲನ ಹಾಗೂ 'ಮಳೆ ಮಾರುವ ಹುಡುಗ' ಪುಸ್ತಕದ ಲೋಕಾರ್ಪಣೆ . ಖಂಡಿತ ಸಮಯ ಮಾಡಿಕೊಂಡು ಬರಬೇಕು ಎನ್ನುವ ಅವರ ಪ್ರೀತಿಯ ಒತ್ತಾಯಕ್ಕೆ 'ನೋಡುವ, ಮೊದಲು ದಿನಾಂಕ ನಿಗದಿಪಡಿಸಿ ತಿಳಿಸಿ' ಎನ್ನುತ್ತಿದ್ದೆನಾದರೂ ನಾನು ಹೋಗಲಾಗುವುದು ಎಂಬ ವಿಶ್ವಾಸ ನನಗೇ ಇರಲಿಲ್ಲ .

ಕಳೆದ ಬಾರಿ ಪ್ರಿಯಾ ಫೋನ್ ಮಾಡಿದಾಗ , ಮನೆಯವರನ್ನು ಕೇಳಿದೆ - 'ಒಂದೆರಡು ದಿನ ಸಾಗರ , ಸಿಗಂದೂರು ಚೌಡೇಶ್ವರಿ ದೇವಸ್ಥಾನ, ಕುಮುಟಾ ಸುತ್ತಿ ಬರೋಣ , ಈ ಸಮಾರಂಭಕ್ಕೆ ಹೋಗುವ ಆಸೆ " ಅಂತ . ಅವರೂ ಒಪ್ಪಿದರು. ಆದರೆ ನಂತರ ಕಾರಣಾಂತರಗಳಿಂದ   ಮನೆಯವರು ಯಾರೂ ಬರಲಾಗದು ಎಂದಾಗ ನಿರಾಸೆಯಾಯಿತು.  ಕಡೆಗೆ ಯಜಮಾನರು "ನೀನೊಬ್ಬಳೆ ಹೋಗಿ ಬಾ " ಎಂದರು .  ನಂತರ ನೋಡಿದರೆ , ಟಿಕೆಟ್ ಸಿಗುತ್ತಿಲ್ಲ . ವಿನಾಯಕ್ ಭಟ್ ಅಲಿಯಾಸ್ ಖುಷಿ ವಿನು ಫೋನ್ ಮಾಡಿ "ಅಕ್ಕಾ ಬರ್ತಿದ್ದೀ ತಾನೇ?" ಎನ್ನುವಾಗ ಟಿಕೆಟ್ ಸಿಗುತ್ತಿಲ್ಲವೆಂದೆ . ಪಾಪ , ನಂತರ ಅವನೇ ಸುತ್ತಿ , ನನಗೆ ಟಿಕೆಟ್ ಕಾದಿರಿಸಿದ.  ಪ್ರಿಯಾಗೆ ಬರಲಾಗದೆಂದು ಹೇಳಿ ಆಗಿತ್ತು. ಹಾಗಾಗಿ ವಿನಾಯಕ್ ಭಟ್ ಗೆ ಹೇಳಿದೆ 'ಪ್ರಿಯಕ್ಕಂಗೆ ಹೇಳೋದು ಬೇಡ , ಇದು ಸರ್ಪ್ರೈಸ್ ಆಗಿರಲಿ ' ಎಂದು . ಆದರೆ ಅವನು ಕಳ್ಳ , ಗುಟ್ಟು ಬಿಟ್ಟು ಕೊಟ್ಟಿರಬೇಕು . ಪುನಃ ಪ್ರಿಯಾ ಅವರ ಫೋನ್ " ಏನು ನಿರ್ಧಾರ ಮಾಡಿದ್ರಿ ?   ಬಂದಿದ್ದರೆ ಚೆನ್ನಿತ್ತು " ಎಂದು . ಕಡೆಗೆ 'ಬರುವ ಯೋಚನೆ ಇದೆ , ನೋಡುವ ' ಎಂದೆ . 

 ಮನೆಯಲ್ಲಿ ಸ್ವಲ್ಪ ಆತಂಕ ಇತ್ತು . ಒಬ್ಬಳನ್ನೇ ಅಷ್ಟು ದೂರ , ಅದೂ ರಾತ್ರಿ ಬಸ್ ನಲ್ಲಿ ಹೇಗೆ ಕಳಿಸೋದು ? ಆ ಕಡೆ ನಕ್ಸಲೈಟ್ ರ ಕಾಟ ಏನಾದರೂ ಇದೆಯಾ  ? ಪ್ರಿಯಾ ಅವರೊಬ್ಬರೇ ಪರಿಚಯ . ಅವರಿಗೆ ನನ್ನನ್ನು ಬೆಳಿಗ್ಗೆ ಪಿಕ್ ಮಾಡಲಿಕ್ಕೆ ಸಮಯ ಸಿಗುತ್ತಾ ಇತ್ಯಾದಿ ಇತ್ಯಾದಿ . ಕಡೆಗೆ ವಿನಾಯಕ್ ಭಟ್ ನನ್ನನ್ನು ಬೆಳಿಗ್ಗೆ ಮೊದಲು ಅವರ ಮನೆಗೆ ಕರೆದುಕೊಂಡು ಹೋಗಿ, ನಂತರ ಕಾರ್ಯಕ್ರಮಕ್ಕೆ ಕರೆತರುವುದು ಎಂದಾಯ್ತು .  ಹೊರಡುವ ಹಿಂದಿನ ದಿನದಿಂದಲೇ ಪ್ರಿಯಾ ಹಾಗೂ ವಿನಾಯಕ್ ಫೋನ್ 'ಎಲ್ಲಾ ಸಿದ್ಧ ತಾನೇ ? ಎನೂ ಯೋಚನೆ ಮಾಡುವಷ್ಟಿಲ್ಲ . ನಾವು ನಿಮ್ಮ ಬಸ್ ನಿಲ್ದಾಣ ತಲುಪುವ ಮೊದಲೇ ಅಲ್ಲಿ ಹಾಜರು' ಎಂದು . ಪುನಃ ಬಸ್ ಹತ್ತಿದ ಮೇಲೆ ಫೋನ್ , ಮಧ್ಯೆ ಫೋನ್ ನಾನು ಎಲ್ಲಿರುವೆ ಎಂದು ತಿಳಿದುಕೊಳ್ಳಲು . ಬಸ್ ನಲ್ಲಿ ಅಚಾನಕ್ ಆಗಿ ಸಾಯೀಶ್ ಭಂಡಾರಿಯ ಭೇಟಿ . ಖುಷಿ ಆಯ್ತು . ಅವರು ಸಾಗರದಲ್ಲಿ ಇಳಿದರೂ ಸಹ , 'ಅಕ್ಕಾ ಫೋನ್ ಮಾಡಿ ಅವರು ಬಂದಿದ್ದಾರಾ ತಿಳಿದುಕೊಳ್ಳಿ ' ಎಂದು ಕಾಳಜಿ ತೋರಿದರು .  ಅಂತೂ ಇಂತೂ ಬೆಳಿಗ್ಗೆ ೭.೩೦ ಕ್ಕೆ ಬಸ್ ಇಳಿದಾಗ ವಿನಾಯಕ್ ಭಟ್ ರೈನ್ ಕೋಟ್ ಹಿಡಿದು ನಿಂತಿದ್ದ "ಏನೇ ಅಕ್ಕಾ ? ಇಷ್ಟು ಹೊತ್ತಾ ಬರೂದು " ಎನ್ನುತ್ತಾ .

ಅಲ್ಲಿಂದ ಅವನ ಊರಾದ  ಬ್ರಹ್ಮೂರಿಗೆ ಹೋಗಿ, ಅವನ ಆಯಿ, ದೊಡ್ಡ ಆಯಿ ಎಲ್ಲರ ಪ್ರೀತಿಯಲ್ಲಿ ಮಿಂದು , ಅವನೇ ಮಾಡಿಕೊಟ್ಟ ಚಪಾತಿ ತಿಂದು , ಕಾರ್ಯಕ್ರಮಕ್ಕೆ ಬಂದೆವು . ಶ್ರೀ ಕರಣಂ ಪವನ್ ಪ್ರಸಾದ್ , 'ಮಳೆ ಮಾರುವ ಹುಡುಗ' ಕಥಾಸಂಕಲನದ  ಕರ್ತೃ ಶ್ರೀ ಕರ್ಕಿ ಕೃಷ್ಣ ಮೂರ್ತಿ , ಶ್ರೀ ವಸಂತಕುಮಾರ್ ಪೆರ್ಲ , ಮತ್ತು ಶ್ರೀ ಶ್ರೀಧರ ಬಳಗಾರರ ಮಾತುಗಳನ್ನು ಕೇಳುವ ಸೌಭಾಗ್ಯ ಒದಗಿತು . ಕಾರ್ಯಕ್ರಮದ ನಂತರ ಊಟ , ನಂತರ ಸ್ವಸ್ತಿ ಬಳಗದ ಸದಸ್ಯರ ಕಿರು ಪರಿಚಯ , ಭೈರಪ್ಪನವರ ಕೃತಿಗಳಲ್ಲಿ  ಮಾನವೀಯ ಸಂಬಂಧಗಳು ಹಾಗೂ ಸಂವೇದನೆಗಳು ಎಂಬ ವಿಷಯದ ಬಗ್ಗೆ ಚರ್ಚೆ ಸೊಗಸಾಗಿತ್ತು . ಕಾರ್ಯಕ್ರಮದ ದೆಸೆಯಿಂದ ಗಾಯತ್ರಿ ಸಚಿನ್ ಹಾಗೂ ಸುಧಾ ಅವರ ಮುಖತಃ ಭೇಟಿ ಕೂಡ ಖುಷಿ ಕೊಟ್ಟಿತು .  ಅಲ್ಲಿಂದ ಪ್ರಿಯಾ ಭಟ್ ಮನೆಗೆ ಹೋದೆವು . ಅಲ್ಲೂ ಸಹ ನಗು, ಹರಟೆ , ರುಚಿಯಾದ ಊಟ ಎಲ್ಲ ಮುಗಿದು, ರಾತ್ರಿ ೭.೩೦ಕ್ಕೆ ನಮ್ಮನ್ನು ಬೀಳ್ಕೊಡಲು ಬಂದರು ಪ್ರಿಯಾ ಭಟ್ , ಮಹಾಬಲೇಶ್ವರ ಭಟ್  ಹಾಗೂ ವಿನಾಯಕ್ ಭಟ್ ಅಲಿಯಾಸ್ ಖುಷಿ ವಿನು .

ಬಸ್ ಹತ್ತುವವರೆಗೂ 'ಅಕ್ಕಾ ಹೋಗಲೆಬೇಕಾ' ಎನ್ನುತ್ತಿದ್ದ ವಿನಾಯಕ್ ಭಟ್ ಹನಿಗಣ್ಣಾಗಿದ್ದು ಕಂಡು ನಾನೂ ಸಹ ಭಾವುಕಳಾಗಿದ್ದು ನಿಜ . ನೂರೆಂಟು ನೆನಪು, ಹತ್ತಾರು ಜನರ ಪ್ರೀತಿ , ಸ್ನೇಹ ಹೊತ್ತು ಬೆಂಗಳೂರಿನ ಕಡೆಗೆ ಹೊರಟಾಗ , ಈ ಎಲ್ಲಾ ಜನರ ಒಂದೇ ಪ್ರಶ್ನೆ 'ಪುನಃ ಬರುವುದು ಯಾವಾಗ ?' ನನ್ನ ಮನದಲ್ಲೂ ಈಗ ಅದೇ ಪ್ರಶ್ನೆ - 'ಇವರೆಲ್ಲರನ್ನೂ ಪುನಃ ನೋಡುವುದು ಯಾವಾಗ ?'

- ತಾರಾ ಶೈಲೇಂದ್ರ




 

No comments:

Post a Comment