Sunday, September 28, 2014

ಹೀಗೊಂದು ನೆನಪು

                   ಕೆಲವು ವರ್ಷಗಳ ಹಿಂದೆ ETV ಅವರು 'ಸಿರಿಗಂಧ' ಎಂಬ ರಸಪ್ರಶ್ನೆ ಕಾರ್ಯಕ್ರಮ ಬಿತ್ತರಿಸುತ್ತಿದ್ದರು . ಸಂಜೀವ್ ಕುಲಕರ್ಣಿ ಅದರ ನಿರೂಪಕರು .  ನಮ್ಮ ಸಂಸ್ಥೆಯಿಂದ ೩ ತಂಡಗಳು ಭಾಗವಹಿಸಿದ್ದೆವು .  ೧೦ ಗಂಟೆಗೆ ಹಾಜರಾಗಬೇಕಿತ್ತು . ಹಾಗಾಗಿ , ಅಂದು ಆಫೀಸಿಗೆ ರಜೆ ಹಾಕಿದ್ದೆ . ಮನೆಯವರು ಕಾರ್ಯನಿಮಿತ್ತ ಚೆನ್ನೈಗೆ ಹೋಗಿದ್ದರು . ಮನೆಯಲ್ಲಿ ನನ್ನ ಅತ್ತೆಯವರಿದ್ದರು . ಬೆಳಿಗ್ಗೆ ಎದ್ದ ಕೂಡಲೇ ಮೊದಲು ಕಂಡಿದ್ದು ಅವರೇ .  "ಅಯ್ಯೋ ಬೆಳಿಗ್ಗೆದ್ದು ನನ್ನ ಮುಖ ಯಾಕೆ ನೋಡಿದೆ ? ಅದೇನೋ  ಸ್ಪರ್ಧೆಗೆ ಬೇರೆ ಹೋಗಬೇಕು ಅಂತಿದ್ದೆ . ಹೋಗಿ ಮೊದಲು ದೇವರ ಪಟ ನೋಡು " ಅಂದರು ( ನಮ್ಮ ಮಾವನವರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದರು ) .  ನಾನು "ಅಮ್ಮೋ ಜೀವನದಲ್ಲಿ ಏನೇನೆಲ್ಲ ಅನುಭವಿಸಿದವರು ನೀವು . ಮುತ್ತಿನಂಥ ಮಗನನ್ನು ನನಗಾಗಿ ಹೆತ್ತವರು ನೀವು . ಹೀಗೆಲ್ಲ ಮಾತಾಡಬೇಡಿ . ನಿಮ್ಮನ್ನೇ ಮೊದಲು ನೋಡಿದ್ದೀನಲ್ಲ , ಇವತ್ತು ಖಂಡಿತಾ ನನಗೆ ಬಹುಮಾನ ಸಿಗುತ್ತೆ ನೋಡ್ತಿರಿ " ಅಂದೆ .  ಅವರು ನಕ್ಕು ಸುಮ್ಮನಾದರು .

                  Studio ತಲುಪಿದಾಗ ಇನ್ನೂ ಸಮಯವಿತ್ತು . ನನ್ನ ಸಹೋದ್ಯೋಗಿ ಹಾಗೂ ಈ ಸ್ಪರ್ಧೆಗೆ ನನ್ನ ಜೊತೆಗಾತಿಯಾಗಿ  ಬಂದಿದ್ದವಳು ಕನ್ನಡದಲ್ಲಿ ಎಂ . ಎ ಮಾಡಿದ್ದ ಕಾರಣ ಇತರ ಎರಡು ತಂಡಗಳಲ್ಲಿ ಬಂದಿದ್ದ ಹುಡುಗರಿಗೆ ಅವಳನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಆಸೆಯಿತ್ತು . ನನ್ನಲ್ಲಿ ಕೇಳುತ್ತಿದ್ದರು "ಅವರನ್ನು ನಮ್ಮ ತಂಡಕ್ಕೆ ಕಳಿಸಿ" ಎಂದು . "ಧಾರಾಳವಾಗಿ ಕರೆದುಕೊಳ್ಳಿ  . ನನಗೆ ಯಾರೇ ಜೊತೆಯಾಗಿ ಬಂದರೂ ಸಂತೋಷ"  ಅಂದೆ .  ಇದ್ದದ್ದು ಕರ್ನಾಟಕದ ಕುರಿತು ರಸಪ್ರಶ್ನೆ ಕಾರ್ಯಕ್ರಮ .  ಅದಕ್ಕೆ ೨ ವಾರ ಮೊದಲು BHELನವರು ನಡೆಸುವ ರಾಜ್ಯ ಮಟ್ಟದ ಕನ್ನಡ ರಸಪ್ರಶ್ನೆ ಸ್ಪರ್ಧೆಗೆ ಹೋಗಿ , ೫ ಅಂಕಗಳಿಂದ ಮೂರನೇ ಸ್ಥಾನ ಕಳೆದುಕೊಂಡಿದ್ದೆನಾದರೂ,  ತಯಾರಿ ಚೆನ್ನಾಗೇ ಮಾಡಿದ್ದೆ . ಹಾಗಾಗಿ ಈ ಕಾರ್ಯಕ್ರಮವೂ ಚೆನ್ನಾಗಿಯೇ ಆಗುತ್ತದೆಂಬ ನಂಬಿಕೆ ಇತ್ತು .  ಜೊತೆಗಾರರು ಯಾರೇ ಬಂದರೂ , ತೊಂದರೆಯಿಲ್ಲವೆಂದು  ಸುಮ್ಮನಿದ್ದೆ . ಆದರೆ ನನ್ನ ಸ್ನೇಹಿತೆ ತಾನೇ ಅವರಿಗೆಲ್ಲ "ಇಲ್ಲ . ನಾವಿಬ್ಬರೇ ತಂಡವಾಗಿ ಭಾಗವಹಿಸುತ್ತೇವೆ " ಎಂದಳು .  ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮ ಅದು . 

                ಅದುವರೆಗೂ ದೂರದರ್ಶನದಲ್ಲಿ ಬಣ್ಣಬಣ್ಣದ ಸೆಟ್ ನೋಡಿ ಬೆರಗಾಗುತ್ತಿದ್ದ ನಾನು , ವಾಸ್ತವದಲ್ಲಿ ಸೆಟ್ ಹೇಗಿರುತ್ತದೆ ಎಂದು ನೋಡಿ , 'ಎಂಥಾ ಭ್ರಮೆ ' ಎಂದುಕೊಂಡಿದ್ದೆ .  ಸಂಜೀವ್ ಕುಲಕರ್ಣಿ ಅವರು "ಓಹೋ ಮಹಿಳಾ ತಂಡ ಬಲು ಗಟ್ಟಿ" ಎಂದು ತಮಾಷೆ ಮಾಡುತ್ತಿದ್ದರು .  ರಸಪ್ರಶ್ನೆ ಕಾರ್ಯಕ್ರಮ ಸೊಗಸಾಗಿದ್ದರೂ, ಆ hotseatನಲ್ಲಿ ಕೂರುವ ಅನುಭವ ಮಾತ್ರ ಮರೆಯಲಾಗದು .  ನಮ್ಮ ತಂಡವೇ ಮುಂದಿದ್ದರೂ ಸಹ , ನನಗೆ ಅತಿ ಹೆಚ್ಚು ಅಂಕ ಗಳಿಸಬೇಕು ಎಂಬ ಆಸೆ . ಪಕ್ಕದಲ್ಲಿ ಇದ್ದ ಹುಡುಗರ ತಂಡ " ನಮಗೂ ಒಂದೆರಡು ಉತ್ತರ ಹೇಳಿಕೊಡಿ " ಎನ್ನುತ್ತಿದ್ದರು.  ಕಡೆಯ ಸುತ್ತಿನಲ್ಲಿ ಪದಬಂಧ ಇತ್ತು .  ಸುಳಿವುಗಳನ್ನು ಸಂಜೀವ್ ಅವರು ನೀಡುತ್ತಿದ್ದರು . ನಮ್ಮ ತಂಡಕ್ಕೆ ಪ್ರಶ್ನೆ ಬಂದಿದ್ದು "ಶಿವರಾಮ ಕಾರಂತರ ಕಾದಂಬರಿಗಳಲ್ಲೊಂದು " ಎಂಬುದು .  ನನಗೆ ಗಾಬರಿಯಲ್ಲಿ ಉತ್ತರವೇ ಹೊಳೆಯುತ್ತಿಲ್ಲ :) . ಇನ್ನೇನು ಸಮಯ ಮುಗಿಯುತ್ತ ಬಂತು ಎನ್ನುವಾಗ ಹೊಳೆಯಿತು "ಮೈಮನಗಳ ಸುಳಿಯಲ್ಲಿ " ಎಂದು .  ಸಂಜೀವ್ ಕುಲಕರ್ಣಿ ಅವರು ಬಹಳ ಸಂತೋಷ ಪಟ್ಟರು . "ನಿಜಕ್ಕೂ ಕಷ್ಟದ ಪ್ರಶ್ನೆಯಾಗಿತ್ತು . ನಿಮಗೆ ಉತ್ತರ ಹೊಳೆದದ್ದು ನನಗೆ ಖುಷಿಯಾಯಿತು" ಎಂದರು .  ನನಗೂ ಸಖತ್ ಖುಷಿ . ಬಹುಮಾನ ಗಳಿಸಿದ್ದಕ್ಕಲ್ಲ . ಆ ಪ್ರಶ್ನೆಗೆ ಉತ್ತರಿಸಿದ್ದಕ್ಕೆ . ಕಾರಣ ಇಷ್ಟೇ .  ವಯಸ್ಸಾದ ನನ್ನ ಅತ್ತೆಯವರಿಗೆ ಪುಸ್ತಕದ ಹುಚ್ಚು . ಈ ಪುಸ್ತಕ ಓದಬೇಕು ಎಂದಿದ್ದರು ಅವರು . ನನಗೆ ಉತ್ತರ ಹೊಳೆಯಲು ಕಾರಣ ಸಹ ಇದೇ ಆಗಿತ್ತು . ಮೊದಲ ಬಹುಮಾನ ಗಳಿಸಿದ್ದಕ್ಕೆ ನನಗಿಂತಲೂ ಹೆಚ್ಚು ಖುಷಿ ಪಟ್ಟವರು ನನ್ನತ್ತೆ .  ಆಗ ಹೇಳಿದೆ " ಬೆಳಿಗ್ಗೆ ಎದ್ದಾಗ ನಿಮ್ಮನ್ನು ನೋಡಿದ್ದಕ್ಕೆ ಮೊದಲ ಬಹುಮಾನ ಬಂತು ನೋಡಿ " .

               ಮತ್ತೆಂದೂ ನನ್ನತ್ತೆ ಆ ಮಾತು ಹೇಳಲಿಲ್ಲ . ಬೇರೆಲ್ಲ ವಿಚಾರಗಳಲ್ಲಿ ಪ್ರಗತಿಪರ ಮನೋಭಾವ ಹೊಂದಿದ್ದ ಅವರು , ಅದ್ಯಾಕೋ ಈ ವಿಷಯದಲ್ಲಿ ಮಾತ್ರ ಬಹಳ ಹಿಂಜರಿದಿದ್ದರು ಅಷ್ಟು ಕಾಲ .  ETV  ರಸಪ್ರಶ್ನೆ ಕಾರ್ಯಕ್ರಮದ ದೆಸೆಯಿಂದ ಇದೊಂದು ಮೂಢ ನಂಬಿಕೆಗೆ ಮುಕ್ತಿ ದೊರಕಿತ್ತು ಅವರ ಮನಸಲ್ಲಿ .

- ತಾರಾ ಶೈಲೇಂದ್ರ
 

1 comment: