Monday, April 14, 2014

ಹೀಗೊಂದು ಗಣೇಶೋತ್ಸವ (short story)

 

                                      



 ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಬಡಾವಣೆಯ ಮಕ್ಕಳು ಗಣೇಶೋತ್ಸವ ನಡೆಸಲು ಉತ್ಸುಕರಾಗಿದ್ದರು . ಅದಕ್ಕಾಗಿಯೇ ಖಾಲಿ ಬಿದ್ದಿದ್ದ ನಿವೇಶನವೊಂದನ್ನು ಹಸನು ಮಾಡಿದ್ದರು. ವಿಶೇಷ ಎಂದರೆ ಇವರ ಗಣೇಶೋತ್ಸವದ ಸಿದ್ಧತೆಗೆ ಯಾವುದೇ ಹಿರಿಯರ ಬೆಂಬಲವಾಗಲಿ, ಒತ್ತಾಸೆಯಾಗಲಿ ಇಲ್ಲ. ಏನೋ ಹುಡುಗರು ಆಸೆಗೆ ಮಾಡಿಕೊಳ್ತವೆ ಎಂಬ ಉಡಾಫೆ .
 
     ಮಕ್ಕಳೂ ಸಹ ಚಂದಾ ವಸೂಲಿ ಮಾಡಲು ಮನೆಮನೆಗೆ ತಾವೇ ಗುಂಪು ಕಟ್ಟಿಕೊಂಡು ಹೋಗುತ್ತಿದ್ದವು. ಹಾಗೆಯೇ ಈ ಬಾರಿ ಗುಂಪಿನ ಪ್ರತಿ ಸದಸ್ಯರೂ ತಲಾ ಕನಿಷ್ಠ ೨೦೦ ರೂಪಾಯಿಗಳನ್ನು ಪೋಷಕರಿಂದ ವಸೂಲಿ ಮಾಡಿ ಚಂದಾ ನೀಡುವುದೆಂದು ನಿರ್ಧಾರ ಮಾಡಿದ್ದವು. ಹಾಗಾಗಿ, ಈ ಬಾರಿ ಸ್ವಲ್ಪ ಹೆಚ್ಚು ಹಣ ಸಂಗ್ರಹವಾಗಿತ್ತು. ಮಕ್ಕಳಿಗೆ ಈ ಬಾರಿ ಸ್ವಲ್ಪ ಜೋರಾಗಿ ಗಣೇಶೋತ್ಸವ ಮಾಡಬೇಕು , ಏನಾದರೂ ಕಾರ್ಯಕ್ರಮ ನಡೆಸಬೇಕು ಎಂಬ ಇರಾದೆ.  ಈ ಹಂತದಲ್ಲಿ ಪೋಷಕರ ಸಲಹೆ ಕೇಳಿದಾಗ , ಕೆಲವು ದೊಡ್ಡ ತಲೆಗಳು ಮಕ್ಕಳ ಗುಂಪಿನೊಂದಿಗೆ ಸೇರಿ ಸಮಾಲೋಚನೆ ನಡೆಸಲಾರಂಭಿಸಿದವು  . ಕಾರ್ಯಕ್ರಮ ನಡೆಸುವ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದವು .  ಮಕ್ಕಳಿಗೆ ತಾವೇ , ತಮ್ಮದೇ ಸಾಂಸ್ಕೃತಿಕ  ಕಾರ್ಯಕ್ರಮ ಆಯೋಜಿಸಬೇಕೆಂಬ ಆಸೆ. ದೊಡ್ಡವರಿಗೆ ಜನರನ್ನು ಆಕರ್ಷಿಸಲು ಸಂಗೀತ ಸಂಜೆ, ನೃತ್ಯ ಕಾರ್ಯಕ್ರಮ ಇತ್ಯಾದಿಗಳ ಕಡೆ ಒಲವು.  ಆದರೆ ಅವಕ್ಕೆಲ್ಲಾ ಬೇಕಾದ ಹಣ? ಅದಕ್ಕಾಗಿ ಇನ್ನಷ್ಟು ಚಂದಾ ವಸೂಲಿ ಮಾಡಬೇಕು. ನಂತರ ಚರ್ಚೆಗೆ ಬಂದ  ವಿಷಯ ಅತಿಥಿಗಳು ಯಾರು ಎಂಬುದು . ಒಬ್ಬರು ಸಿನಿಮಾ ತಾರೆಯೆಂದರೆ, ಮತ್ತೊಬ್ಬರು ಕ್ರಿಕೆಟಿಗರನ್ನು ಕರೆಸೋಣ ಎಂದರು . ರಾಜಕೀಯ ಪ್ರವೇಶ ಮಾಡಲು ಹವಣಿಸುತ್ತಿದ್ದವರೊಬ್ಬರು ರಾಜಕಾರಣಿಗಳನ್ನು ಕರೆಸಿದರೆ , ಬಡಾವಣೆಯ ಅಭಿವೃದ್ಧಿಗೆ ಸಹಾಯಕವಾಗುವುದೆಂದರು .  ಮಕ್ಕಳಿಗೋ , ಯಾಕಾದರೂ ಇವರನ್ನು ಮಧ್ಯೆ ಪ್ರವೇಶಿಸಲು ಬಿಟ್ಟೆವೋ ಎಂಬಂತಾಗಿತ್ತು .
 
     ಅಂದು ಯಾವ ನಿರ್ಧಾರಕ್ಕೂ ಬರಲಾಗದ್ದರಿಂದ , ಮುಂದಿನ ಭಾನುವಾರ ಸಭೆ ಸೇರುವುದೆಂದು ತೀರ್ಮಾನಿಸಿ, ಹಿರಿಯರೆಲ್ಲ ತಮ್ಮ ತಮ್ಮ ಕೆಲಸಕ್ಕೆ ತೆರಳಿದರು. ಮಕ್ಕಳಿಗೆ ಸಮಾಧಾನವಿಲ್ಲ. ಇರುವ ಹಣದಲ್ಲೇ ವಿಭಿನ್ನ ಕಾರ್ಯಕ್ರಮ ರೂಪಿಸಬೇಕು ಎಂಬುದು ಅವರ ಆಶಯ .  ಯಾವ ದೊಡ್ಡವರ ಸಹವಾಸವೂ ಬೇಡ . ಯಾರೂ ಸಹ ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮನೆಯಲ್ಲಿ   ಬಹಿರಂಗಗೊಳಿಸಬಾರದು ಎಂದು ಎಲ್ಲರೂ ಒಪ್ಪಿಕೊಂಡರು .  ಈಗ ಪುಟ್ಟ ತಲೆಗಳೆಲ್ಲ ಒಂದುಗೂಡಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡವು. ಕಾರ್ಯಕ್ರಮದ ವಿವರವನ್ನು ಗೌಪ್ಯವಾಗಿ ಇಡಬೇಕು ಎಂದು ಎಲ್ಲರೂ ಮಾತನಾಡಿಕೊಂಡರು.  ದೊಡ್ಡವರಿಗೆ 'ಬೇರೆ ಕಾರ್ಯಕ್ರಮ ಎನಿಲ್ಲ. ನಾವು ಒಂದು ಕಿರುನಾಟಕ ಆಡುತ್ತೇವೆ ಅಷ್ಟೆ ' ಎಂದು ತಿಳಿಸಿದರು. 
 
     ಗಣೇಶ ಚತುರ್ಥಿಯ ಬೆಳಿಗ್ಗೆ ಮಕ್ಕಳೆಲ್ಲ ಹೋಗಿ ಪುಟ್ಟದಾದ ಮಣ್ಣಿನ ಗಣಪತಿಯ ಮೂರ್ತಿಯನ್ನು  ತಂದು ಪ್ರತಿಷ್ಟಾಪಿಸಿ, ಪೂಜೆಯನ್ನೂ ಮಾಡಿದರು.  ಅಮ್ಮಂದಿರನ್ನು ಪುಸಲಾಯಿಸಿ , ಗೊಜ್ಜವಲಕ್ಕಿ, ರಸಾಯನ ಮಾಡಿಸಿ , ಪ್ರಸಾದ ವಿನಿಯೋಗವನ್ನು ಮಾಡಿದರು. ಸಂಜೆ ೬.೩೦ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿಕೊಂಡರು.  ಹಿರಿಯರೆಲ್ಲ 'ಏನೋ , ಹುಡುಗು ಬುದ್ಧಿ, ಏನು ಕಾರ್ಯಕ್ರಮ ಮಾಡ್ತವೋ ನೋಡೋಣ ' ಎಂದು ಚದುರಿದರು.  ಮಕ್ಕಳು ಕಾರ್ಯಪ್ರವೃತ್ತರಾದರು. 
 
    ಸಂಜೆ ೬. ೩೦ಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಕ್ಕಳು ತಮ್ಮ ಪೋಷಕರಿಗೆ ಅಪ್ಪಣೆ ಮಾಡಿದ್ದರಿಂದ ಎಲ್ಲರೂ ಸಮಯಕ್ಕೆ ಸರಿಯಾಗಿ ನೆರೆದರು. ಕೂರಲು ಹಾಕಿದ ಖುರ್ಚಿಗಳ ಮುಂದೆ ಖಾಲಿ ಇದ್ದ ಜಾಗವೇ ವೇದಿಕೆ. ಪುಟಾಣಿ ಲಿಖಿತ ಸುಶ್ರಾವ್ಯವಾಗಿ ಪ್ರಾರ್ಥನೆ ಹಾಡಿದಳು.  ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟಿದರು.  ಮುಂದಿನ ಕಾರ್ಯಕ್ರಮದ ಬಗ್ಗೆ ತಿಳಿಸಲು ವಿಪಿನ್ ಎದ್ದು ನಿಂತ . "ಈ ಸಂಜೆಯ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಸ್ವಾಗತ. ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಒಬ್ಬರನ್ನೋ , ಇಬ್ಬರನ್ನೋ ಅತಿಥಿಗಳಾಗಿ ಆಹ್ವಾನಿಸುವುದು ವಾಡಿಕೆ . ಆದರೆ ಇಂದು ನಮ್ಮೊಂದಿಗಿರುವ ಗಣ್ಯರು ೨೦ ಮಂದಿ" ಎಂದಾಗ ಎಲ್ಲರಿಗೂ ಆಶ್ಚರ್ಯ.  ವೇದಿಕೆಯಿಲ್ಲ, ಹಾಗಾದರೆ ಗಣ್ಯರೆಲ್ಲಿ ? ಆಗ ವಿಪಿನ್ "ನಮ್ಮ ಕಾರ್ಯಕ್ರಮಕ್ಕೆ ಯಾವುದೋ ತಾರೆಯರು ಅಥವಾ ರಾಜಕಾರಣಿಗಳನ್ನು ಆಹ್ವಾನಿಸುವುದಕ್ಕಿಂತ , "ಜೀವನ ಸಂಧ್ಯಾ " ವೃದ್ಧಾಶ್ರಮದ ಹಿರಿಯ ಚೇತನಗಳಾದ ಇವರನ್ನು ಆಹ್ವಾನಿಸುವುದು ಸೂಕ್ತ ಎನಿಸಿತು. ತಮ್ಮ ಇಳಿವಯಸ್ಸಿನಲ್ಲಿ ತಮ್ಮವರಿಂದ ದೂರವಿರುವ ಇವರೆಲ್ಲರಿಗೂ , ನಮ್ಮೊಡನೆ ಸ್ವಲ್ಪ ಸಮಯ ಕಳೆಯುವುದರಿಂದ ಸಂತೋಷ ಸಿಗುವುದೆಂದು ನಮಗೆಲ್ಲ ಅನಿಸಿತು. ಅವರೂ ಸಹ ಯಾವುದೇ ಹಮ್ಮು-ಭಿಮ್ಮುಗಳಿಲ್ಲದೆ ಬರಲು ಒಪ್ಪಿಗೆ ನೀಡಿದರು .  ಅವರಿಗೆಲ್ಲ ನಿಮ್ಮ ಹಾಗೂ ನಮ್ಮೆಲ್ಲರ ಪರವಾಗಿ ಸ್ವಾಗತ . ಹಾಗೆಯೇ ಪ್ರಖ್ಯಾತರನ್ನು ಸನ್ಮಾನಿಸುವುದು ನಾವೆಲ್ಲರೂ ಬಲ್ಲೆವು. ಆದರೆ, ಸದ್ದಿಲ್ಲದೇ ಸರಿಯುವ ಇರುವೆ ಹೆಗ್ಗೆಲಸ  ಮಾಡುವಂತೆ , ನಮ್ಮೆಲ್ಲರ ನಿತ್ಯಜೀವನದಲ್ಲಿ ನಮಗೆ ಸಹಾಯಕರಾದ , ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೆ , ತಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸುವ 'ಅಂಚೆಯ ನಾಗಕ್ಕ' ಇಂದಿನ ಕಾರ್ಯಕ್ರಮದ ಶೋಭೆ" ಎಂದನು .  ಅದೇ ಸಮಯಕ್ಕೆ ಸರಿಯಾಗಿ ಮುಂದಿನ ಖುರ್ಚಿಗಳಲ್ಲಿ ಆಸೀನರಾಗಿದ್ದ ೨೦ ಮಂದಿ ವೃದ್ಧರೂ , ಅಂಚೆಯ ನಾಗಕ್ಕನೂ ಎದ್ದು ನಿಂತು, ಸಭಿಕರ ಕಡೆಗೆ ತಿರುಗಿ , ನಮಸ್ಕಾರ ಮಾಡಿದರು. ನಂತರ 'ಜೀವನ ಸಂಧ್ಯಾ' ದ ಹಿರಿಯ ಸದಸ್ಯೆ ಮಕ್ಕಳು ನೀಡಿದ ಶಾಲನ್ನು ನಾಗಕ್ಕನಿಗೆ ಹೊದಿಸಿ, ಹಣ್ಣಿನ ಬುಟ್ಟಿ ನೀಡುವಾಗ , ನಾಗಕ್ಕನ ಮುಖದಲ್ಲಿ ಧನ್ಯತಾಭಾವ. 
 
     ನಂತರ ಶುರುವಾಯ್ತು ಮಕ್ಕಳ ಲಘು ನಾಟಕ.  ಎಲ್ಲರ ಮನರಂಜಿಸಿದ ಮಕ್ಕಳನ್ನು 'ಜೀವನ ಸಂಧ್ಯಾ' ದ ಹಿರಿಯರು ತಬ್ಬಿ ಹರಸಿದರು. "ಇಷ್ಟು ಚಿಕ್ಕ ವಯಸ್ಸಿಗೇ ಇಂಥ ಉದಾತ್ತ ಮನೋಭಾವ ಬೆಳೆಸಿಕೊಂಡಿರುವ ನಿಮ್ಮನ್ನು ಹೆತ್ತವರು ಪುಣ್ಯವಂತರು"  ಎನ್ನುವಾಗ ಪೋಷಕರ ಕಣ್ಣುಗಳಲ್ಲಿ ನೀರಾಡಿತು .  ಈ ಬಾರಿಯ ಗಣೇಶೋತ್ಸವ ಸಾರ್ಥಕವಾಯ್ತು ಎಂಬ ಭಾವನೆ ಎಲ್ಲರಲ್ಲೂ ಮೂಡಿತ್ತು .  

---  ತಾರಾ ಶೈಲೇಂದ್ರ 
 
 

2 comments:

  1. Wow Great
    Huttinindhale prathiyobbaru
    Uttama Udattha manobhaavantare
    Beledanthe namma suttamuttalina vyakthi galu sannivesha sandarbha galu
    Alpabuddhi swarthi yannagisuttave

    ReplyDelete